ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ == ಶ್ರೀ ಶೈಲಮ್ ಯಾತ್ರಾಸ್ಥಳ == ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಆಂಧ್ರ ಪ್ರದೇಶದ ಶ್ರೀ ಶೈಲದಲ್ಲಿದೆ. ಇದು ಜ್ಯೋತಿರ್ಲಿಂಗ ವಲ್ಲದೆ ಮಹಾ ಶಕ್ತಿ ಪೀಠವೆಂದೂ ಹೆಸರಾಗಿದೆ. ಇದು ಕರ್ನೂಲು ಜಿಲ್ಲೆಯ ನಲ್ಲಮಲ ಅಥವಾ ದ್ರೋಣಾಚಲ ಬೆಟ್ಟಗಳ ಸಾಲಿನಲ್ಲಿದೆ. ಕೃಷ್ಣಾನದಿ ಪಕ್ಕದಲ್ಲೇ ಆಳವಾದ ಕಣಿವೆಯಲ್ಲಿ ಹರಿಯುವುದು. ಇದು ಶೈವರಿಗೂ ಕನ್ನಡನಾಡಿನ ವೀರಶೈವರಿಗೂ ಮುಖ್ಯ ಯಾತ್ರಾ ಸ್ಥಳವಾಗಿದೆ. ಕನ್ನಡನಾಡಿನ ಶಿವ ಭಕ್ತೆಯೂ ಶರಣಳೂ , ವಚನಕಾರ್ತಿಯೂ ಆದ ಉಡುತಡಿಯ ಅಕ್ಕ ಮಹಾದೇವಿ ಸರ್ವಸಂಗ ಪರಿತ್ಯಾಗಿಯಾಗಿ ಚನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯೆಂದು ಅವನನ್ನು ಅರಸುತ್ತಾ ಶ್ರೀಶೈಲಕ್ಕೆ ಬಂದು ಅಲ್ಲಿನ ಕದಳೀವನದಲ್ಲಿ ಶಿವನಲ್ಲಿ ಐಕ್ಯವಾದಳು ಎಂದು ಇತಿಹಾಸ ಹೇಳುತ್ತದೆ. ಸ್ವಲ್ಪ ದೂರದಲ್ಲಿ ಅಕ್ಕಮಹಾದೇವಿಯ ಗುಹೆಯೂ ಇದೆ. ಅಲ್ಲಿಗೆ ಹೋಗಲು ಸರ್ಕಾರದವರು (ಪ್ರವಾಸ ಇಲಾಖೆಯವರು) ಬೋಟಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಶರಣ ಶ್ರೇಷ್ಠರಾದ ಅಲ್ಲಮ ಪ್ರಭುಗಳು ಶ್ರೀಶೈಲದಲಿ ಇದ್ದರು ಎಂದು ಹೇಳುತ್ತಾರೆ. (ಹರಿಹರ ಕವಿಯ ಅಕ್ಕಮಹಾದೇವಿ ಚರಿತ್ರೆ) == ಶ್ರೀ ಮಲ್ಲಿಕಾರ್ಜುನ ದೇವಾಲಯ == ಶಿವನ ಜ್ಯೋತಿರ್ಲಿಂಗ ಮಂದಿರವು ಶ್ರೀಶೈಲದ ದ್ರೋಣಾಚಲದ ಬೆಟ್ಟದ ಸಾಲಿನಲ್ಲಿ ,ಕಲ್ಲು ಬಂಡೆಗಳ ಬೆಟ್ಟದ ಮೇಲೆ ಇದೆ. ಮಂದಿರಕ್ಕೆ ಅನೇಕ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು.ನಾಲ್ಕು ಕಡೆಗಳಲ್ಲಿ ಎತ್ತರವಾದ ಗೋಡೆಗಳಿವೆ. ನಾಲ್ಕು ಎತ್ತರದ ಗೋಪುರಗಳಿವೆ. ಮೊದಲನೆಯ ವಿಶಾಲವಾದ ಪ್ರಾಕಾರದ ಆಚೆ ಎರಡನೆಯ ಪ್ರಾಕಾರದಲ್ಲಿರವ ಗರ್ಭಗುಡಿಗೆ ಬಂದರೆ ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ದರ್ಶನವಾಗುತ್ತದೆ. ಲಿಂಗ ತುಂಬಾ ಚಿಕ್ಕದು ; ೮-೧೦ ಅಂಗುಲ ಎತ್ತರ ಇರಬಹುದು. ಬೆಟ್ಟದ ಕೆಳಗಿನಿಂದ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕು. ಪೂಜೆ ಮಾಡಿಸಿ, ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ದರ್ಶನ ಮಾಡಿಕೊಂಡು ಬರಬಹುದು. ಆವರಣದಲ್ಲಿ ಎರಡು ಕೊಳಗಳಿವೆ. ಸುತ್ತಲೂ ಸಣ್ಣ ಸಣ್ಣ ಶಿವಮಂದಿರಗಳಿವೆ . ಮಲ್ಲಿಕಾರ್ಜುನ ಮಂದಿರದ ಹಿಂಭಾಗದಲ್ಲಿ ಶ್ರೀ ಪಾವ೯ತಿ ಮಂದಿರವಿದೆ. ಇಲ್ಲಿ ಪಾವ೯ತಿ ದೇವಿಗೆ ಮಲ್ಲಿಕಾದೇವಿ ಎಂದು ಹೆಸರಿದೆ. ಶಿವನಿಗೆ ಇಲ್ಲಿ ಅರ್ಜುನ ಎಂದೂ ಹೇಳುತ್ತಾರೆ. ಈ ಶಿವ ಮತ್ತು ಮಲ್ಲಿಕಾ (ಪಾರ್ವತಿ) ಹೆಸರುಗಳು ಸೇರಿ ಶಿವನಿಗೆ ಮಲ್ಲಿಕಾರ್ಜುನ ಎಂದು ಜ್ಯೋತಿರ್ಲಿಂಗಕ್ಕೆ ಹೆಸರು ಬಂದಿದೆ. ಮಂದಿರದ ಎದುರು ದೊಡ್ಡದಾದ ನಂದಿ ವಿಗ್ರಹ ಇದೆ. ಶಿವರಾತ್ರಿಯ ದಿನ ಬಹಳ ಜನ ಸೇರುತ್ತಾರೆ ಆಗ ಶಿವ ಪಾರ್ವತಿಯರ ವಿವಾಹ ಮಹೋತ್ಸವ ನಡೆಯುತ್ತದೆ. ಪ್ರತಿದಿನ ನೂರಾರು ಭಕ್ತರು ದೇವರ ದರ್ಶನ ಪಡೆಯಲು ಬರುತ್ತಾರೆ.ಸಮೀಪದಲ್ಲೇ ಹಠೇಶ್ವರ ಹಾಗೂ ಬ್ರಮರಾಂಬಾ ದೇವಿಯರ ಮಂದಿರಗಳಿವೆ. ಪ್ರಸಿದ್ಧ ಅಂಬಾದೇವಿಯ ಮಂದಿರ ಭವ್ಯವಾಗಿದೆ. ಶ್ರೀ ಮಲ್ಲಿಕಾರ್ಜುನನ ದರ್ಶನದಿಂದ ಸಕಲ ಪಾಪವೂ ಪರಿಹಾರವಾಗಿ ಮುಕ್ತಿ ದೊರೆಯುವುದೆಂಬ ನಂಬುಗೆ ಇದೆ. ಸಮೀಪದ ಪಟ್ಟಣ ಕರ್ನೂಲು, ಇಲ್ಲಿಂದ ೧೦೦ ಕಿಮೀ.ದೂರವಿದೆ. ಭದ್ರಾಚಲಂ ಮತ್ತು ಮಹಾನಂದಿ ಇಲ್ಲಿಗೆ ಹತ್ತಿರದ ತೀರ್ಥ ಕ್ಷೇತ್ರಗಳು. ನಾಗಾರ್ಜನ ಸಾಗರ ಮತ್ತೊಂದು ಪ್ರೇಕ್ಷಣೀಯ ಸ್ಥಳ. ಇಲ್ಲಿಗೆ ವಾಹನ ವ್ಯವಸ್ಥೆ ಚೆನ್ನಾಗಿದೆ. == ಶಿವ ಪುರಾಣದ ಕಥೆ == ಇತರೆ ಜ್ಯೋತಿರ್ಲಿಂಗದ ಕಥೆಯಂತೆಯೇ ಇಲ್ಲಿಯ ಕಥೆಯೂ ಇದೆ. ಬ್ರಹ್ಮ ಮತ್ತು ವಿಷ್ಣು ಇವರಲ್ಲಿ ಯಾರು ಮೇಲೆಂದು ಚರ್ಚೆಯಾದಾಗ, ಅವರು ಯಾರು ಮೇಲೆಂದು ಶಿವನನ್ನು ಕೇಳುವರು. ಶಿವನು ಮೂರು ಜ್ಯೋತಿಗಳ (ಬೆಳಕಿನ) ಆದಿ ಅಂತ್ಯ ವಿಲ್ಲದ ಮೂರು ಕಂಬಗಳನ್ನು (ಅವು ಬ್ರಹ್ಮ , ವಿಷ್ಣು ಮಧ್ಯ ಮಹೇಶ್ವರ) ಸೃಷ್ಠಿಸಿದನು (ಜ್ಯೋತಿರ್ಲಿಲಿಂಗ). ವಿಷ್ಣು ಮತ್ತು ಬ್ರಹ್ಮ ರಿಗೆ ಅದರ (ಮಧ್ಯದಲಿಂಗ) ಮತ್ತು ಮೇಲಿನ ತುದಿಯನ್ನು ಕಂಡುಹಿಡಿಯಲು ತಿಳಿಸಿದನು. ವಿಷ್ಣುವು ಅದರ ಕೆಳಗಿನ ತುದಿಯನ್ನು ಕಾಣದೇ ಹಿಂತುರುಗಿ ಬಂದು ತನಗೆ ಆ ಲಿಂಗದ ತುದಿ ಸಿಗದಿರುವ ವಿಷಯ ತಿಳಿಸಿದನು. ಆದರೆ ಬ್ರಹ್ಮ ನು (ಮೇಲಿನ) ತಾನು ನೋಡಿರುವದಾಗಿ ಹೇಳಿದನು. ಈಶ್ವರನು .ಎರಡನೇ ಜ್ಯೋತಿಸ್ಥಂಬವಾಗಿದ್ದು ಬ್ರಹ್ಮನು ಸುಳ್ಳು ಹೇಳಿದನೆಂದು ತಿಳಿದು ಅವನಿಗೆ ಪೂಜೆಯಿಲ್ಲದಿರಲಿ ಎಂದು ಶಪಿಸಿದನು .ಅದರೆ ಸತ್ಯ ಹೇಳಿದ ವಿಷ್ಣು ವು ಪೂಜೆಗೆ ಅರ್ಹನೆಂದು ಹೇಳಿದನು ಆ ಜ್ಯೋತಿಯೇ ಈ ಜ್ಯೋತಿರ್ ಲಿಂಗವಾಗಿದೆ ಎಂದು ಶಿವ ಪುರಾಣ ಹೇಳುತ್ತದೆ. == ಶ್ರೀ ಶೈಲದ ಹೆಸರಿನ ಕಥೆ. == ಶಿವ ಪಾರ್ವತಿಯರು ತಮ್ಮ ಮಕ್ಕಳಾದ ಗಣೇಶ ಕಾರ್ತಿಕೇಯರಿಗೆ ವಿವಾಹಮಾಡಲು ನಿಶ್ಚಯಿಸಿ ವಧುಗಳಾದ ಸಿದ್ಧಿ ಮತ್ತು ಬುದ್ಧಿಯರನ್ನು ವಿವಾಹಮಾಡಲು ನಿಶ್ಚಯಿಸಿದರು. ಅವನ್ನು ಯಾರಿಗೆ ವಿವಾಹಮಾಡಬೇಕೆಂದು ಪರೀಕ್ಷಿಸಲು ಒಂದು ಪಣವನ್ನು ಇಟ್ಟರು. ಈ ಜಗತ್ತನ್ನು ಮೊದಲು ಯಾರು ಸುತ್ತು ಹಾಕಿ ಬರುವರೋ ಅವರಿಗೆ ವಿವಾಹ ಮಾಡುವುದೆಂದು ನಿರ್ಧರಿಸಿದರು. ಕಾರ್ತಿಕೇಯನು ಅವನ ವಾಹನ ನವಿಲಿನ ಮೇಲೆ ಜಗತ್ತನ್ನು ಸುತ್ತಿ ಬರಲು ಹೊರಟನು. ಗಣೇಶನು ಶಿವ ಪಾರ್ವತಿಯರೇ ಜಗತ್ತಿನ ಸ್ವರೂಪರೆಂದು ಹೇಳಿ ಅವರನ್ನೇ ಒಂದು ಸುತ್ತು ಬಂದು ಕುಳಿತನು. ಅದನ್ನು ಒಪ್ಪಿ ಶಿವ ಪಾರ್ವತಿಯರು ಗಣೇಶನಿಗೆ ಸಿದ್ಧಿ ಮತ್ತು ಬುದ್ಧಿಯರನ್ನು ಕೊಟ್ಟು ವಿವಾಹ ಮಾಡಿದರು. ಕಾರ್ತಿಕೇಯನು ಜಗವನ್ನು ಪ್ರದಕ್ಷಿಣೆಮಾಡಿ ಬಂದು ಇದನ್ನು ನೋಡಿ ಸಿಟ್ಟಾಗಿ ಕೈಲಾಸವನ್ನು ಬಿಟ್ಟು ಬಂದು ಕೃವಂಗ (ಶ್ರೀಶೈಲ) ಪರ್ವತಕ್ಕೆ ಬಂದು ನೆಲಸಿದನು . ಶಿವ ಪಾರ್ವತಿಯರು ಅವನನ್ನು ಹಿಂಬಾಲಿಸಿ ಬಂದು ಅವನಿಗೆ ಸಮಾಧಾನ ಮಾಡಲು ನೋಡಿದರು ಆದರೆ ಅವನು ಒಪ್ಪದೆ ಬೇರೆ ಪರ್ವತಕ್ಕೆ ಹೋಗಲು ಹವಣಿಸಿದನು. ಆಗ ದೇವತೆಗಳು ಕುಮಾರನೂ ಶಿವ ಪಾರ್ವತಿಯರೂ ಅಲ್ಲಿಯೇ ನೆಲಸಬೇಕೆಂದು ಕೋರಿದರು. ಅಂತಯೇ ಮುರುಗನೂ (ಕಾರ್ತಿಕೇಯ : ಕುಮಾರ) ಶಿವ ಪಾರ್ವತಿಯರೂ ಅಲ್ಲಿಯೇ ನೆಲಸಿದರು. ಅದಕ್ಕೆ ಶ್ರೀ ಶೈಲ ವೆಂದು ಹೆಸರುಬಂದಿತು. ಆದರೆ ನಂತರ ಶಿವನು ಅಮಾವಾಸ್ಯೆಯಂದೂ , ಪಾರ್ವತಿಯು ಹುಣ್ಣಿಮೆಯಂದೂ ಕಾರ್ತಿಕೇಯನನ್ನು ನೋಡಲು ಅಲ್ಲಿಗೆ ಬರುವರೆಂಬ ನಂಬುಗೆ ಇದೆ ೧. == ಶಕ್ತಿ ಪೀಠದ ಪುರಾಣ ಕಥೆ == ದಕ್ಷ ಯಜ್ಞದ ಕಾಲದಲ್ಲಿ ಯಜ್ಞ ಕುಂಡಕ್ಕೆ ಅಹುತಿಯಾದ ಸತೀ ದೇವಿಯು ನಂತರ ಪಾರ್ವತಿಯಾಗಿ ಹುಟ್ಟಿ ಬಂದು ಶಿವನನ್ನು ವಿವಾಹವಾದ ಕಥೆ ಪ್ರಸಿದ್ಧವಾಗಿದೆ. ಆ ಸತಿ ದೇವಿಯ ಶಕ್ತಿ ಹದಿನೆಂಟು ಕಡೆ ನೆಲಸಿ ಆ ಪ್ರದೇಶಗಳು ಹದಿನೆಂಟು ಮಹಾಶಕ್ತಿ ಸ್ಥಳಗಳೆಂದು ಪ್ರಸಿದ್ಧವಾಗಿವೆ *ಆ ಹದಿನೆಂಟು ಮಹಾ ಶಕ್ತಿ ಸ್ಥಳಗಳಲ್ಲಿ ಶ್ರೀಶೈಲವೂ ಒಂದು . ಇದರ ಹಿಂದಿರುವ ಕಥೆ . ಸತೀದೇವಿಯು ಯಜ್ಞಕುಂಡವನ್ನು ಪ್ರವೇಶಿಸಿದ ನಂತರ ಶಿವನು ಅವಳ ದೇಹವನ್ನು ಹೊತ್ತು ಸಂಚರಿಸುವಾಗ ಅವಳದೇಹದ ಒಂದು ಭಾಗ (ತುಣುಕು - ತುಟಿ) ಶ್ರೀಶೈಲ ಪ್ರದೇಶಗಲ್ಲಿ ಬಿದ್ದಿತೆಂದೂ, ಆದ್ದರಿಂದ ಇದು ಮಹಾಶಕ್ತಿ ಸ್ಥಳವಾಗಿ ಪರಿಗಣಿಸಲ್ಪಟ್ಟಿರುವುದಂದೂ ಹೇಳವರು . == ಶ್ರೀಶೈಲಕ್ಕೆ ಮಾರ್ಗ. == ಹ್ಶೆದರಾಬಾದು ಇಲ್ಲಿಗೆ ೧೭೫ ಕಿ.ಮೀ. ಹತ್ತಿರದ ರೈಲ್ವೆ ನಿಲ್ದಾಣ ಮರ್ಕಾಪುರ ; ಓಂಗಲೆ ; ನಂದ್ಯಾಲ ; ಹ್ಶೆದರಾಬಾದು -ಮೆಹಬೂಬನಗರ ( ರಾ ಹೆ.೭) - ಶ್ರೀಶೈಲಮ್ /ಓಂಗಲೆ - ಗೂತಿ - ಅತಮ್‌ಕೂರು- ಶ್ರೀಶೈಲಮ್ ದೇವಾಲಯ. == ನೋಡಿ == ಶ್ರೀಶೈಲ ಚರ್ಚೆಪುಟ:ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಕೇದಾರನಾಥ, ಉತ್ತರಾಂಚಲ) ಶ್ರೀ ವಿಶ್ವೇಶ್ವರ ಜ್ಯೋತಿರ್ಲಿಂಗ ((ಕಾಶಿ, ಉತ್ತರಪ್ರದೇಶ) ಶ್ರೀ ವೈದ್ಯನಾಥ ಜ್ಯೋತಿರ್ಲಿಂಗ ಬಿಹಾರ ರಾಜ್ಯ ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಮಧ್ಯ ಪ್ರದೇಶದ ಉಜ್ಜಯನಿ ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ ಮಧ್ಯ ಪ್ರದೇಶ ನರ್ಮದಾ ತೀರ ಶ್ರೀ ಸೋಮನಾಥ ಜ್ಯೋತಿರ್ಲಿಂಗ ಪ್ರಭಾಸ ಕ್ಷೇತ್ರ ಜುನಾಗಡ ಜಿಲ್ಲೆ, ಗುಜರಾತ್ , ಸೌರಾಷ್ತ್ರ : ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ ದ್ವಾರಕಾ ಗುಜರಾತ್ ಶ್ರೀ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ನಾಸಿಕ ಜಿಲ್ಲೆ ಮಹಾರಾಷ್ತ್ರ ರಾಜ್ಯ ; ಶ್ರೀ ಗೃಷ್ಣೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರದ ಔರಂಗಾಬಾದ್ ಕ್ಶೇತ್ರ ಶ್ರೀ ಭೀಮಾಶಂಕರ ಜ್ಯೋತಿರ್ಲಿಂಗ - ಶ್ರೀರಾಮನಾಥೇಶ್ವರ ಜ್ಯೋತಿರ್ಲಿಂಗ ತಮಿಳುನಾಡು ದ್ವಾದಶ ಜ್ಯೋತಿರ್ಲಿಂಗಗಳು ಮತ್ತು ಜ್ಯೋತಿರ್ಲಿಂಗಗಳು-ಜ್ಯೋತಿರ್ಲಿಂಗ == ಆಧಾರ. == ದ್ವಾದಶ ಜ್ಯೋತಿರ್ಲಿಂಗಗಳು ಕೈ ಹೊತ್ತಿಗೆ- ಪ್ರವಾಸ ಲೇಖನ ಗ್ರಂಥ_ ಬರೆದವರು ಶ್ರೀಮತಿ ಚೂಡಾಮಣಿ ರಾಮಚಂದ್ರ ಸಾಗರ ಶಿವಮೊಗ್ಗ ಜಿಲ್ಲೆ ೧-://..// ://..//Mallikarjuna_Swamy